ದಿಟ್ಟ ಕಾರ್ಯಾಚರಣೆ, ಅತ್ಯುತ್ತಮ ಸೇವೆ: ಗಡ್ಡೇಕರ್‌ಗೆ ರಾಷ್ಟ್ರಪತಿ ಪದಕ

ಅಪರಾಧ ನಿಯಂತ್ರಣದಲ್ಲಿ ಪರಿಣಾಮಕಾರಿ ಕಾರ್ಯಾಚರಣೆ, ಜನಸ್ನೇಹಿ ಪೊಲೀಸ್ ಸೇವೆ ಹಾಗೂ ಕರ್ತವ್ಯನಿಷ್ಠೆ ಮೂಲಕ ಗಮನ ಸೆಳೆದಿರುವ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಬಿ.ಆರ್. ಗಡ್ಡೇಕರ್ ಅವರಿಗೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರತಿಷ್ಠಿತ ‘ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ’ ದೊರೆತಿದೆ.

2005ರಲ್ಲಿ ಪಿಎಸ್‌ಐ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ಬಿ.ಆರ್. ಗಡ್ಡೇಕರ್, ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಅಪರಾಧ ಪತ್ತೆ ಹಾಗೂ ನಿಯಂತ್ರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಸಿಸಿಬಿ ಮತ್ತು ಸಿಇಎನ್ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ವೇಳೆ ಹಲವು ಮಹತ್ವದ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.

ಕುಖ್ಯಾತ ಇರಾನಿ ಗ್ಯಾಂಗ್‌ಗಳ ವಿರುದ್ಧದ ಕಾರ್ಯಾಚರಣೆ, ಸೈಬರ್ ವಂಚನೆ ಪ್ರಕರಣಗಳ ಪತ್ತೆ ಹಾಗೂ ವಂಚನೆಗೊಳಗಾದವರಿಗೆ ಹಣ ವಾಪಸ್ ಕೊಡಿಸುವಲ್ಲಿ ಪ್ರಮುಖ ಪಾತ್ರ, ಅಂತರರಾಷ್ಟ್ರೀಯ ಫ್ರಾಡ್ ಕಾಲ್ ಸೆಂಟರ್‌ಗಳ ವಿರುದ್ಧದ ಕಾರ್ಯಾಚರಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅವರ ಕಾರ್ಯಕ್ಷಮತೆ ಗಮನಾರ್ಹವಾಗಿದೆ.

ಕರ್ತವ್ಯದಲ್ಲಿ ತೋರಿದ ದಕ್ಷತೆ ಹಾಗೂ ಉತ್ತಮ ಸೇವೆಗಾಗಿ ಈ ಹಿಂದೆ ಹಲವು ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರಗಳನ್ನು ಪಡೆದಿರುವ ಬಿ.ಆರ್. ಗಡ್ಡೇಕರ್ ಅವರಿಗೆ ಇದೀಗ ರಾಷ್ಟ್ರಮಟ್ಟದ ಗೌರವ ಸಂದಿದೆ. ಅವರ ಸಾಧನೆಗೆ ಬೆಳಗಾವಿ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ವಲಯದಿಂದ ಅಭಿನಂದನೆಗಳು ವ್ಯಕ್ತವಾಗಿವೆ.

Related Articles

TRENDING ARTICLES