ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ ಹೊರಬಿದ್ದಿದೆ. ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ, ನಾಗರಿಕ ರಕ್ಷಣೆ ಹಾಗೂ ಕಾರಾಗೃಹ ಇಲಾಖೆಯ ಒಟ್ಟು 1,057 ಸಿಬ್ಬಂದಿಗೆ ವಿವಿಧ ಸೇವಾ ಪದಕಗಳನ್ನು ಪ್ರಕಟಿಸಲಾಗಿದೆ.

ಇದರಲ್ಲಿ 301 ಶೌರ್ಯ ಪದಕಗಳು ಪ್ರಮುಖವಾಗಿವೆ. ಕರ್ತವ್ಯದ ವೇಳೆ ಜೀವದ ಹಂಗು ತೊರೆದು ಸಾಹಸ ಪ್ರದರ್ಶಿಸಿದ 272 ಪೊಲೀಸ್ ಸಿಬ್ಬಂದಿ ಹಾಗೂ 29 ಅಗ್ನಿಶಾಮಕ ಸಿಬ್ಬಂದಿಗೆ ಈ ಗೌರವ ಲಭಿಸಿದೆ.
301 ಶೌರ್ಯ ಪದಕಗಳ ಪೈಕಿ 197 ಪದಕಗಳು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿಗೆ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ 51 ಸಿಬ್ಬಂದಿ, ಈಶಾನ್ಯ ರಾಜ್ಯಗಳ 12 ಸಿಬ್ಬಂದಿ ಹಾಗೂ ಇತರ ಪ್ರದೇಶಗಳ 41 ಸಿಬ್ಬಂದಿಯೂ ಶೌರ್ಯ ಪದಕಕ್ಕೆ ಭಾಜನರಾಗಿದ್ದಾರೆ.
ಇನ್ನು ವಿಶಿಷ್ಟ ಸೇವೆಗಾಗಿ 92 ರಾಷ್ಟ್ರಪತಿಗಳ ಪದಕಗಳನ್ನು ಘೋಷಿಸಲಾಗಿದೆ. ಇದರಲ್ಲಿ 83 ಪೊಲೀಸ್, 4 ಅಗ್ನಿಶಾಮಕ, 3 ನಾಗರಿಕ ರಕ್ಷಣೆ ಮತ್ತು ಗೃಹರಕ್ಷಕ ಹಾಗೂ 2 ಕಾರಾಗೃಹ ಇಲಾಖೆಯ ಸಿಬ್ಬಂದಿ ಸೇರಿದ್ದಾರೆ.
ಕರ್ತವ್ಯನಿಷ್ಠೆ ಹಾಗೂ ವಿಶೇಷ ಸೇವೆಗಾಗಿ 664 ಸಿಬ್ಬಂದಿಗೆ ಪ್ರಶಂಸನೀಯ ಸೇವಾ ಪದಕಗಳನ್ನೂ ಪ್ರಕಟಿಸಲಾಗಿದೆ.
ಒಟ್ಟಾರೆ ಈ ಬಾರಿ 1,057 ಸಿಬ್ಬಂದಿಯ ಸೇವೆಯನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಶೌರ್ಯ ಮತ್ತು ವಿಶಿಷ್ಟ ಸೇವೆಗಾಗಿ ಗೌರವಿಸಲಾಗುತ್ತಿದೆ.


