ಹಳಿಯಾಳ: ಜುಲೈ 16 ರಂದು ನಡೆದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಹಳಿಯಾಳ ಪೊಲೀಸರು, ಮಹಾರಾಷ್ಟ್ರದ ಕುಖ್ಯಾತ ಅಂತರರಾಜ್ಯ ಕಳ್ಳರ ತಂಡವನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು ₹7.95 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ₹4 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪಂಡರಾಪುರ ವ್ಯಾಪ್ತಿಗೆ ಸೇರಿದ ಕುಖ್ಯಾತ ಕಳ್ಳರಾದ ಲಖನ ಅಶೋಕ ಕುಲಕರ್ಣಿ (31), ಸಂದೀಪ ದಿಲೀಪ ಲವಟೆ (25), ವಿವೇಕ ಶಿವಪ್ಪ ಕುಂಬಾರ (26), ಮತ್ತು ಅಜೀಜ್ ಅಲಿಯಾಸ್ ಚೋಟೆ ದಾದಾಪೀರ ಮನಗುಳಿ (28) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.
ಪೊಲೀಸ್ ವಿಚಾರಣೆ ವೇಳೆ, ಈ ಕಳ್ಳರ ತಂಡ ಯಲ್ಲಾಪುರ ಮತ್ತು ಕುಂದಾಪುರದಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದೆ. ಈ ಆರೋಪಿಗಳ ಮೇಲೆ ಈಗಾಗಲೇ 32ಕ್ಕೂ ಹೆಚ್ಚು ಕಳ್ಳತನ, ಸುಲಿಗೆ, ದರೋಡೆ ಮತ್ತು ಹಲ್ಲೆ ಪ್ರಕರಣಗಳು ವಿವಿಧ ರಾಜ್ಯಗಳ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇವುಗಳಲ್ಲಿ ಮೂರು ಪ್ರಕರಣಗಳಲ್ಲಿ ಇವರಿಗೆ ಶಿಕ್ಷೆಯೂ ಆಗಿದೆ.
ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ. ಎನ್., ಹೆಚ್ಚುವರಿ ಅಧೀಕ್ಷಕ ಜಗದೀಶ ನಾಯ್ಕ ಮತ್ತು ಇತರೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಳಿಯಾಳ ಪಿಎಸ್ಐಗಳಾದ ಬಸವರಾಜ ಮಬನೂರ ಮತ್ತು ಕೃಷ್ಣ ಅರಕೇರಿ ಅವರ ನೇತೃತ್ವದ ಕಾರ್ಯಾಚರಣೆಯಲ್ಲಿ ಗಣಪತಿ, ಶ್ರೀಶೈಲ್ ಜಿ.ಎಂ., ವಿನೋದ ಜಿ.ಬಿ., ಲಕ್ಷ್ಮಣ ಪೂಜಾರಿ, ಅರವಿಂದ ಭಜಂತ್ರಿ, ಮಂಜುನಾಥ ಬಾಲಿ, ಆಯಾಜ್ ಯಾದವಾಡ, ಕಾಶಿನಾಥ ಬಿಳ್ಳೂರ, ವಿನಾಯಕ ನಾಯ್ಕ, ಯೋಗೇಶ ಗೌಡಾ ಹಾಗೂ ದಾಂಡೇಲಿ ಠಾಣೆಯ ಸಿಬ್ಬಂದಿಗಳಾದ ಕೃಷ್ಣ ಬೆಳ್ಳಿವರಿ, ಉದಯ ಗುನಗಾ, ಉಮೇಶ ತೇಲಿ ಭಾಗವಹಿಸಿದ್ದರು. ಈ ಯಶಸ್ವಿ ಕಾರ್ಯಾಚರಣೆಗೆ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



